Posts

ಅನುಬಂಧ

ನನ್ನ ಎದೆಯ ಮೇಲೆ ರೇಷಿಮೆಯಂಥ ಮೃದುವಾದ ವಸ್ತ್ರವೊಂದನ್ನು ಇರಿಸಿದಂತೆ ಭಾಸವಾಯಿತು. ನಾನು ನಿದ್ರೆಯಿಂದ ಎಚ್ಚೆತ್ತು ಗಮನಿಸಿದೆ, ಅವಳು ತನ್ನ ಕೋಮಲವಾದ ಕೈಯನ್ನು ನನ್ನ ಹೃದಯದ ಮಿಡಿತಗಳ ಮೇಲೆ ಇರಿಸಿದ್ದಾಳೆ. ಅವಳು ತನ್ನನ್ನು ತಾನು ನನ್ನ ತೀರಾ ಹತ್ತಿರಕ್ಕೆ ಜರುಗಿಸಿಕೊಂಡಿದ್ದಾಳೆ. ಬಳುಕುವ ಹೂಬಳ್ಳಿಯೊಂದು ಆಸರೆಗಾಗಿ ಮರವನ್ನು ತಬ್ಬಿಕೊಂಡಂತೆ ಅವಳು ನನ್ನನ್ನು ಬಿಗಿದಪ್ಪಿಕೊಂಡಿದ್ದಾಳೆ. ನನ್ನ ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಆದರೆ ನಾನು ಆಶ್ಚರ್ಯಕರವಾಗಿ ಶಾಂತನಾಗಿದ್ದೇನೆ. ಅವಳ ನಿರ್ಮಲ, ಸುಂದರ ಮುಖವನ್ನು ಸಮೀಪದಿಂದ ನೋಡುತ್ತೇನೆ‌. ಅವಳು ಕಣ್ಣುಗಳು ತೃಪ್ತಿಯ ಆನಂದದ ಅಭಿವ್ಯಕ್ತಿಯಲ್ಲಿ ಮುಚ್ಚಿಕೊಂಡಿವೆ. ಪುಟ್ಟ ಮಗುವನ್ನು ತಬ್ಬಿಕೊಳ್ಳುವಂತೆ ನಾನು ಅವಳನ್ನು ನನ್ನ ಎದೆಗೊತ್ತಿಕೊಳ್ಳುತ್ತೇನೆ. ಅವಳ ಹೃದಯದ ಪ್ರತಿಯೊಂದು ಮಿಡಿತವೂ ನನ್ನ ಹೃದಯದ ಪ್ರತಿಧ್ವನಿಯೇನೋ ಎಂಬಂತೆ ಸಾಮ್ಯತೆಯಿಂದ ಬಡಿದುಕೊಳ್ಳುತ್ತದೆ. ಈ ಕ್ಷಣದಲ್ಲಿ ನಾನೇನು ಅನುಭವಿಸುತ್ತಿರುವೆನೋ ಅದನ್ನೇ ಅವಳ ಹೃದಯವೂ ಅನುಭವಿಸುತ್ತಿರುವಂತೆ ಭಾಸವಾಗುತ್ತದೆ. ನಾನು ತುಂಬಾ ಮೆಲ್ಲನೆ ಅವಳ ಹೆಸರನ್ನು ಕರೆಯುತ್ತೇನೆ. ನಿದ್ರೆಯ ಮೈ ಮರೆವಿನಲ್ಲೂ ಅವಳು ಹಾಡು ಹಕ್ಕಿಯ ರಾಗ ಮಾದುರ್ಯದಲ್ಲಿ ಶಾಂತವಾಗಿ ಉಲಿದಂತೆ ಭಾಸವಾಗುತ್ತದೆ. ನಾನು ಅವಳ ತಲೆಯನ್ನು ಅನುನಯದಿಂದ ನೇವರಿಸುತ್ತೇನೆ. ಅವಳ ಮುಖದ ಮೇಲಾಡುವ ದುಂಬಿ ಮುಂಗುರುಳುಗಳನ್ನು ಅಸೂಯೆಯಿಂದ ನೋಡುತ್ತೇನೆ. ಅವುಗಳನ್ನು ಎತ್ತಿ...

ನಿಸರ್ಗದ ಹಾಡು

               ಅವನು ಬದುಕಿದ್ದೇ ಹಾಗೆ ; ಎಂದೂ ಬತ್ತದ ಜೀವಕಾರುಣ್ಯದ ಚಿಲುಮೆಯಂತೆ. ಮರಿದುಂಬಿಯ ಮಧುರ ಝೇಂಕಾರಕ್ಕೆ ಒಡಲು ತೆರೆದು ಆಹ್ವಾನವೀಯುವ ಸುಕೋಮಲ ನವಸುಮವು ಸೂಸುವ ಪರಿಮಳದ ಘಮ್ಮೆನ್ನುವ ಘಮಲನ್ನು ಎದೆಯೊಳಗೆ ತುಂಬಿಟ್ಟುಕೊಂಡ ಚೆಲುವಾದ ಹೂಮನಸು ಅವನದು. ತನ್ನ ಸುತ್ತಲಿನ ಪರಿಸರವನ್ನು ಘಮಿಸುವಂತೆ ಮಾಡಲೋಸುಗ ಅವನು ತನ್ನ ಮೈಮನಸ್ಸನ್ನೆಲ್ಲ ಶ್ರೀಗಂಧದಂತೆ ತೇಯ್ದುಕೊಳ್ಳುತ್ತಿದ್ದ.                ಅವನು ನಿಸರ್ಗದ ರಮ್ಯತೆಯ ಕುರಿತು ಮನದಣಿಯೆ ಮಾತಾಡುತ್ತಿದ್ದ. ಮನುಷ್ಯನ ಬದುಕಿಗೆ ಪ್ರಕೃತಿ ಕರುಣಿಸಿದ ಅಪಾರ ಕೊಡುಗೆಗಳನ್ನು ಪ್ರಾರ್ಥನೆ ಎಂಬಂತೆ ಕೊಂಡಾಡುತ್ತಿದ್ದ. ನಿಸರ್ಗದ ನಿಷ್ಕಲ್ಮಶ ನೀತಿ,  ಧಾರೆಯೆರೆದ ಪ್ರೀತಿ ಮತ್ತು ವರದಾನವಾಗಿ ನೀಡಿದ ಸ್ವಾತಂತ್ರ್ಯದಿಂದಾಗಿಯೇ ಮನುಷ್ಯ ನಾಗರಿಕನಾಗಿದ್ದು ಎಂದು ಸಾರುತ್ತಿದ್ದ. ಮನುಷ್ಯ ನಾಗರಿಕ ಸಮಾಜದ ಒಬ್ಬ ಸದಸ್ಯನಾಗಿದ್ದರೂ ಅವನು ' ಪ್ರಕೃತಿಯ ಮಡಿಲ ಕೂಸು '; ಪ್ರಕೃತಿಯನ್ನು ತಾಯಿಯಂತೆಯೇ ಆದರಿಸಬೇಕು, ತನ್ನನ್ನು ಸಲುಹುವ ತಾಯ ಮಮತೆಯ ಮಡಿಲು ಘಾಸಿಗೊಳ್ಳದಂತೆ ಜೋಪಾನ ಮಾಡಬೇಕು ಎಂದು ಪ್ರತಿಪಾದಿಸುತ್ತಿದ್ದ. ಪ್ರಕೃತಿ ಪ್ರೇಮ ಮನುಷ್ಯನ ಧಮನಿ ಧಮನಿಗಳಲ್ಲಿ ಢಾಳಾಗಿ ಸಂಚರಿಸಿ ಹಸಿರೇ ಉಸಿರಾಗಬೇಕೆಂದು ಹಂಬಲಿಸುತ್ತಿದ್ದ.             ...

🌺ಗೆಳೆಯರು ನನ್ನ ಪಾಲಿಗೆ ಪ್ರಕೃತಿಯ ಮೇರುಕೃತಿ🌺

               🌺ಈ ಕ್ಷಣ, ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನ ನೆನಪು ನನ್ನ ಸ್ಮ್ರತಿ ಪಟಲದ ಮುಂದೆ ಸ್ಥಬ್ಧ ಚಿತ್ರದಂತೆ ಸರಿದು ಹೋಯಿತು. ಅವತ್ತು ತರಗತಿಯಲ್ಲಿ ಮೇಷ್ಟ್ರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದರು. ನನ್ನನ್ನು ಹೊರತು ಪಡಿಸಿ ಯಾರೊಬ್ಬರೂ ಉತ್ತರ ಹೇಳಿರಲಿಲ್ಲ. ಅವರನ್ನೆಲ್ಲ ಸಾಲಾಗಿ ನಿಲ್ಲಲು ಸೂಚಿಸಿದ ಮೇಷ್ಟ್ರು ಎಲ್ಲಾ ಮಕ್ಕಳಿಗೂ ಮೂಗು ಹಿಡಿದು ಕೆನ್ನೆಗೆ ಹೊಡೆಯುವಂತೆ ನನಗೆ ಆದೇಶಿಸಿದರು. ಎದುರಿಗಿದ್ದವರು ನನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆತ್ಮೀಯ ಗೆಳೆಯರು. ಅವರ ಕೆನ್ನೆಗೆ ಹೊಡೆಯುವ ಮಾತು ನನ್ನ ಕಲ್ಪನೆಯಲ್ಲೂ ಸುಳಿಯದ ವಿಚಾರವಾಗಿತ್ತು. ನಾನು ಕಲ್ಲಾಗಿ, ಕದಲದೇ ನಿಂತು ಬಿಟ್ಟಿದ್ದೆ. ಮೇಷ್ಟ್ರು ನನ್ನ ಬೆನ್ನ ಹಿಂದೆ ನಿಂತು ಬೆತ್ತವನ್ನು ಬೆನ್ನಿಗೆ ತಾಕಿಸಿ "ಬೇಗ ಹೊಡಿ,ಹೊಡಿಯದೇ ಹೋದರೆ ನಿನಗೆ ಬೀಳ್ತಾವೆ ನೊಡು" ಎಂದು ಹೆದರಿಸುತ್ತಿದ್ದರು. ಮೇಷ್ಟ್ರು ಹೇಳಿದ " ನಿನಗೆ ಬೀಳ್ತಾವೆ ನೋಡು" ಎನ್ನುವ ಮಾತುಗಳು ಆ ಕ್ಷಣದಲ್ಲಿ ನಾನು ಏನು ಮಾಡಬೇಕು ಎಂದು ನಿರ್ಧರಿಸಲು ನನಗೆ ಪ್ರೆರಣೆಯಾದವು. ನಾನು ಮೆಲ್ಲನೇ ಹೆಜ್ಜೆ ಹಾಕಿ ಒಬ್ಬೊಬ್ಬ ಗೆಳೆಯ- ಗೆಳತಿಯರ ಮೂಗನ್ನು ಅತ್ಯಂತ ಪ್ರೀತಿಯಿಂದ ಹಿಡಿದು ಅವರ ಕೆನ್ನೆಯನ್ನು ಮೃದುವಾಗಿ ತಾಕುತ್ತಾ ಹಾದು ಹೋದೆ. ಆಮೇಲೆ ನೇರವಾಗಿ ಹೋಗಿ ಮೇಷ್ಟ್ರ ಎದುರಿಗೆ ಕೈ ಮುಂದೆ ಮಾಡಿ ನಿಂತುಕೊಂಡೆ. ಎಲ್ಲರ ಕಣ್ಣುಗಳು ...

🌺ಅಮ್ಮ ಹಾಡಿದೊಂದು ಹಾಡು🌺

🌺 ಅಮ್ಮ ಹಾಡಿದೊಂದು ಹಾಡು ಇನ್ನೂ ಮೊಳಗಿದೆ  ಮನದ ಮೂಲೆಯನ್ನು ಸೋಕಿ ಸದಾ ಸಂತೈಸಿದೆ                         !!ಅಮ್ಮ!! 🌺 ಬಾಳ ಪಯಣದಲ್ಲಿ ದಣಿದು ಕುಸಿದು ಬೀಳಲು ಎದ್ದು ಮುಂದೆ ಸಾಗುವಂತೆ ಸ್ಪೂರ್ತಿ ತುಂಬಲು                       !!ಅಮ್ಮ!! 🌺 ಕತ್ತಲಲ್ಲಿ ಕಳೆದು ಹೋಗಿ ಧೈರ್ಯ ಗುಂದದಂತೆ ಹಣತೆಯಂತೆ ಬೆಳಗಿ ಬಾಳು ಎಂದು ಹರಸುವಂತೆ                     !!ಅಮ್ಮ!! 🌺 ಅಂತರಂಗದಾ ಮೃದುಂಗ ಸದಾ ಮಿಡಿಯುವಂತೆ ಸ್ವರ,ರಾಗ,ತಾಳ,ಭಾವ,ಮೇಳ ಒಲಿದು ಹಾಡಿದಂತೆ                      !!ಅಮ್ಮ!! 🌺 ಅರ್ಪಣೆ:- Metikurke Ramaswamy Kamala  🌺ಖಾದರ್ ಮೊಹಿಯೊದ್ದೀನ್.ಕೆ.ಎಸ್

🌺ಈ ಕವಿತೆ🌺

🌺ಈ ಕವಿತೆ🌺 🌺 ನೀವು ನನ್ನೊಂದಿಗೆ ಸಂವಹನಕ್ಕೆ ಇಳಿದಿದ್ದಾಗ ನನ್ನ ಹೃದಯದ ಕವಾಟದಿಂದ  ಇಣುಕಿ ತುಂಟ ನಗೆ ಚೆಲ್ಲಿದ ಒಂದು  ಭಾವ ಕುಸುಮ ಈ ಕವಿತೆ 🌹 ನೀವು ನನ್ನ ಭಾವ ಮಂದಿರದ ದ್ವಾರದಲ್ಲಿ  ನಿಂತಾಗ ಬಾಗಿಲು ತೆರೆದ ಭಾವಗಳು  ಸಂಭ್ರಮಿಸಿ, ನಿಮ್ಮನ್ನು ಸ್ವಾಗತಿಸಿ ಬರಮಾಡಿಕೊಂಡ ಭಾವುಕ ಗಳಿಗೆ ಈ ಕವಿತೆ 🌺 ನೀವು ನನ್ನ ಬದುಕಿನ ಹೊಸ್ತಿಲು ದಾಟಿ ನಿಮ್ಮೆದೆಯ ಭಾವ ಬಳ್ಳಿಯನು ನನ್ನೆದೆಗೆ ಹಬ್ಬಿಸಿ ಬೆಳದಿಂಗಳ ಮೋಹಕ ನಗು ಚೆಲ್ಲಿದಾಗ ಹೊಮ್ಮಿದ ಸಂತಸದ ಹೊನಲು ಈ ಕವಿತೆ 🌹 ನಿಮ್ಮ ದಾರಿಗುಂಟ ಹಾಸಿದ ಮಲ್ಲಿಗೆಯ ಹೂ ಹಾಸಿಗೆಯ ಮೇಲೆ ಒಂದೊಂದೇ ಹೆಜ್ಜೆ ಇರಿಸಿ ನೀವು ನನ್ನ ಹೃದಯದ  ಆಳಕ್ಕೆ ಜಾರುತ್ತಿದ್ದಾಗ ನನ್ನ ಚಾಚಿದ ತೋಳುಗಳು  ನಿಮ್ಮ ಕೊರಳ ಮಾಲೆಯಾದ ಕ್ಷಣ ಈ ಕವಿತೆ 🌺 ನಿಮ್ಮ ಕಡೆದಿಟ್ಟ ರೂಪರಾಶಿಯ ಮೇಲೆ ನನ್ನ ಬೆರಳುಗಳು ಹರಿದಾಡಿ ಕವಿತೆ ಬರೆಯುತ್ತಿದ್ದಾಗ ಮೂಡಿದ ನಿಮ್ಮ ಕೆನ್ನೆಯ ಮೇಲಿನ ನಾಚಿಕೆಗೆ ಕಾಮನಬಿಲ್ಲು ರಂಗು ಬಳಿದು ಸ್ವಪ್ನ ಲೋಕಕ್ಕೆ ಕರೆದೊಯ್ಯುತ್ತಿದ್ದಾಗ ತುಳುಕಿದ ಭಾವ ಈ ಕವಿತೆ 🌹 ನೀವು ನನ್ನೆದೆಯ ಹರುವಿನ ಮೇಲೆ ತಲೆ ಇಟ್ಟು ಭಾವಗೀತೆಗೆ ರಾಗ ಹೊಂದಿಸಿ,ಉಸುರಿಗೆ ಉಸಿರು ತಾಕಿಸಿ ಭಾವನೆಗಳ ತಿದಿಯೊತ್ತಿ ಭಾವ ತಂತುಗಳನ್ನು ಮೀಂಟಿದಾಗ ಮಿಡಿದ ಹೃದಯ ವೀಣೆಯ ಝೇಂಕಾರ ಈ ಕವಿತೆ 🌺 ನಿಮ್ಮ ದುಂಬಿ ಮುಂಗುರನ್ನು ಮೃದುವಾಗಿ ಸೋಕಿ ಹಣೆಯ ಮೇಲೆ ಮುತ್ತುಗಳ ಮಳೆ ಗರೆಯುತ್ತಿದ್ದಾಗ ನಿಮ್ಮ ಕಣ್ಣಂಚಿ...

🌺ಬರವಣಿಗೆ ಎಂದರೆ ಏಕಾಂತದೊಂದಿಗಿನ ಸಂವಾದ🌺 🌺ಒಂದು ತಪಸ್ಸು 🌺ಸಾಕ್ಷಾತ್ಕಾರ🌺🌹

              🌺ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೋಹ ಇದೆಯಲ್ಲ ; ಅದು ಅಷ್ಟು ಸುಲಭವಾಗಿ ಎಲ್ಲರಿಗೂ ದಕ್ಕುವಂಥದ್ದಲ್ಲ. ಅದು ಏಕಾಂತದೊಂದಿಗಿನ ಮುಖಾಮುಖಿ. ಅದನ್ನು ಯಾರು ಯಾರಿಗೂ ಕಲಿಸಿಕೊಡಲು ಸಾಧ್ಯವೂ ಇಲ್ಲ. ಬರಹಗಾರನೊಬ್ಬ ಏಕಾಂತತೆಯೊಂದಿಗಿನ ಸಂವಾದದಲ್ಲಿ ಅನಂತತೆಯಲ್ಲಿ ಲೀನನಾಗುತ್ತಾನೆ. ಸೃಷ್ಟಿಯೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾನೆ. ಅನನ್ಯ ಸೃಷ್ಟಿಗಾಗಿ ಹಂಬಲಿಸಿ ಸೃಷ್ಟಿಯೇ ತಾನಾಗಿಹೋಗುತ್ತಾನೆ. ಹೊಸದಾದ ಸೃಜನಶೀಲ ಸೃಷ್ಟಿಯನ್ನು ಸೃಜಿಸುತ್ತಾನೆ. ಇದೊಂದು ತಾಪಸನ ಪರಿಕ್ರಮ. ಅದೊಂದು ಅಪರೂಪದ, ಅಮೂಲ್ಯ ಉಡುಗೊರೆಯೇ ಇರಬೇಕು !           🌺ನೀವು ಈ ಮಳೆ ಹನಿಯ ಮಾಧುರ್ಯವನ್ನು ಕೇಳಿಸಿಕೊಂಡೇ ಇರುತ್ತೀರಿ. ಅದು ಸೃಷ್ಟಿಸುವ ನಾದ ಮಾಧುರ್ಯ ನಿಮ್ಮ ಹೃದಯ ಮತ್ತು ಮನಸ್ಸುಗಳನ್ನು ಮತ್ತಷ್ಟು ಮಾಧುರ್ಯ ಪೂರ್ಣ ಗೊಳಿಸಿರುವುದನ್ನು ನೀವು ಅನುಭವಿಸಿಯೇ ಇರುತ್ತೀರಿ ! ಅಂತಹ ಭಾವಮಯ ಸಂದರ್ಭದಲ್ಲಿ ನಿಮ್ಮೊಳಗೊಂದು ಕಾವ್ಯದ ಊಟೆ ಚಿಮ್ಮಿದರೆ !? ಅದು ಝರಿಯಾಗಿ ಹರಿದು ನಿಮ್ಮ ಹೃದಯದ ಮೂಲೆ ಮೂಲೆಗಳಲ್ಲಿ ಪಯಣಿಸಿ, ನಿಮ್ಮ ಎದೆಯ ನೆಲವನ್ನು ಹದಗೊಳಿಸಿ ನಿಮ್ಮನ್ನು ಭಾವನಾತ್ಮಕ ಲೋಕವೊಂದಕ್ಕೆ ಸೆಳೆದೊಯ್ದರೆ !? ಅಲ್ಲಿ ಆ ಲೋಕದಲ್ಲಿ ಕವಿತೆಯೊಂದು ಕಣ್ಣು ಮಿಟುಕಿಸಿ ಕಿರುನಗೆ ಚೆಲ್ಲಿದರೆ !? ಅದು ಸೃಜನಶೀಲ ಬರಹಗಾರನೊಬ್ಬ ಸಾಕ್ಷಾತ್ಕರಿಸಿಕೊಂಡ ಕನಸುಗಳ ಲೋಕವೇ ಆಗಿರುತ್ತ...